ಸೋಮವಾರಪೇಟೆ, ಅ. ೧೧: ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಕಬಡ್ಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ತಾಲೂಕು ತಂಡವನ್ನು ಪ್ರತಿನಿಧಿಸಿದ್ದ ಆಟಗಾರರು ವೀರಾಜಪೇಟೆ ತಂಡವನ್ನು ಮಣಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಬಾಲಕರ ವಿಭಾಗದ ಕಬಡ್ಡಿಯಲ್ಲಿ ಸೋಮವಾರಪೇಟೆ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಬಿಟಿಸಿಜಿ ಕಾಲೇಜಿನ ಗೌತಮ್, ಧ್ಯಾನೇಶ್, ಪ್ರೀತೇಶ್, ಗುರುಪ್ರಸಾದ್, ವಿಜೇತ ತಂಡದ ಪರವಾಗಿ ಆಟವಾಡಿದರು.

ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್‌ನಲ್ಲಿ ವೀರಾಜಪೇಟೆ ತಾಲೂಕು ತಂಡ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ಬಿಟಿಸಿಜಿ ಕಾಲೇಜಿನ ಬಾಲಕಿಯರು ವಾಲಿಬಾಲ್ ಮತ್ತು ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು. ಹೆಚ್.ಆರ್. ಜೀವಿತ ಶಟಲ್ ಮತ್ತು ವಾಲಿಬಾಲ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೋನಿಶ ಮತ್ತು ಹನಿ ವಾಲಿಬಾಲ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಿಗೆ ಕೂರ್ಗ್ ಪಬ್ಲಿಕ್ ಸ್ಕೂಲ್‌ನ ನಿರ್ದೇಶಕಿ ಶ್ವೇತ ಗಣಪತಿ, ಪ್ರಾಂಶುಪಾಲ ಡಾ. ಎಂ. ರಾಮಚಂದ್ರ ಬಹುಮಾನ ವಿತರಿಸಿದರು.