ನಾಪೋಕ್ಲು, ಅ. ೨೭: ಕಾವೇರಿ ತೀರ್ಥೋದ್ಭವ ಕಳೆದು ಪವಿತ್ರ ತುಲಾ ಮಾಸದ ಹತ್ತನೇ ದಿನದ ಉತ್ಸವ ಪತ್ತಲೋದಿ ಆರಾಧನೋತ್ಸವ ಸೋಮವಾರ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತ್ತು.
ದೇವಾಲಯದಲ್ಲಿ ಪರದಂಡ ಕುಟುಂಬಸ್ಥರು ಪತ್ತಲೋದಿ ಉತ್ಸವ ನೆರವೇರಿಸಿದರು. ಈ ಸಂದರ್ಭ ಸೇರಿದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ದಿಗೆ ವಿಶೇಷ ಪೂಜೆ, ಮಹಾಪೂಜೆ, ಸತ್ಯನಾರಾಯಣ ಪೂಜೆ, ತುಲಾಭಾರ ಸೇವೆ ಸಲ್ಲಿಸಿದರು. ಉತ್ಸವದ ಅಂಗವಾಗಿ ದೇವಾಲಯ ಹಾಗೂ ಗರ್ಭಗುಡಿಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಉತ್ಸವ ಮೂರ್ತಿಯೊಂದಿಗೆ ದೇವರ ನೃತ್ಯ ಬಲಿ ಜರುಗಿತ್ತು.
ಈ ಸಂದರ್ಭ ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷರೂ, ದೇವತಕ್ಕರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಡಿನ ಎಲ್ಲಾ ಸಮುದಾಯದ ಭಕ್ತವೃಂದಕ್ಕೆ ಕ್ಷೇಮಾಭಿವೃದ್ಧಿ ಬೆಳೆ ರಕ್ಷಣೆ, ಸುಖ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯ ಸೇರಿದಂತೆ ಪೇರೂರು, ನೆಲಜಿ ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಲ್ಲೂ ಪತ್ತಲೋದಿ ಉತ್ಸವ ಸಂಭ್ರಮದಿAದ ನಡೆಯಿತು.