ಕುಶಾಲನಗರ, ಡಿ. ೩: ಅನಾರೋಗ್ಯದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಾಗಿದ್ದ ಪಡಿತರ ಚೀಟಿ ಪಡೆಯಲು ಶಿರಂಗಾಲ ಗ್ರಾಮದ ಮಹಿಳೆಯೊಬ್ಬರು ಕ್ಷೇತ್ರ ಶಾಸಕ ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದ ಕೇವಲ ೨೪ ಗಂಟೆಗಳ ಅವಧಿಯಲ್ಲಿ ಕುಶಾಲನಗರ ತಾಲೂಕು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮೂಲಕ ರೇಷನ್ ಕಾರ್ಡ್ ಒದಗಿಸಿ ನೆರವಾಗಿದೆ. ಕುಶಾಲನಗರ ತಾಲೂಕು ಶಿರಂಗಾಲ ಗ್ರಾಮದ ಬಡ ಕುಟುಂಬದ ಮಹಿಳೆ ಕೆ.ಸಿ. ಕುಮಾರಿ ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತನ್ನ ಪತಿಯ ತುರ್ತು ಚಿಕಿತ್ಸೆಗೆ ಆಹಾರ ಇಲಾಖೆ ಮೂಲಕ ಪಡಿತರ ಚೀಟಿ ಪಡೆಯಲು ಶಾಸಕರಿಗೆ ಮನವಿ ಮಾಡಿದ್ದರು.

ತಕ್ಷಣ ಸ್ಪಂದಿಸಿದ ಶಾಸಕರು ಕುಶಾಲನಗರ ತಾಲೂಕಿನ ಆಹಾರ ಇಲಾಖೆಯ ನಿರೀಕ್ಷಕಿ ಸ್ವಾತಿ ಅವರಿಗೆ ಸೂಚನೆ ನೀಡಿ ತಕ್ಷಣ ಅಗತ್ಯ ಪಡಿತರ ಚೀಟಿಯನ್ನು ಕೊಡಲೇ ಒದಗಿಸುವಂತೆ ತಿಳಿಸಿದ್ದಾರೆ.

ಕಳೆದ ಶನಿವಾರ ನೀಡಿದ ಅರ್ಜಿಗೆ ಸ್ಪಂದಿಸಿ ಪಡಿತರ ಚೀಟಿ ಸಿದ್ಧವಾಗಿದ್ದು, ಕುಶಾಲನಗರದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಕುಟುಂಬ ಸದಸ್ಯರಿಗೆ ಶಾಸಕರು ಅಧಿಕಾರಿಗಳ ಸಮ್ಮುಖದಲ್ಲಿ ವಿತರಿಸಿದರು.