ಮಡಿಕೇರಿ, ಡಿ. ೫ : ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿಯ ನಗರಸಭಾ ಉದ್ಯಾನವನದ ಜಾಗದಲ್ಲಿ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭೆ ಸದಸ್ಯರಾದ ಅನಿತಾ ಪೂವಯ್ಯ, ಕೆ.ಎಸ್. ರಮೇಶ್, ಎಸ್.ಸಿ. ಸತೀಶ್, ಚಿತ್ರಾವತಿ, ಉಮೇಶ್ ಸುಬ್ರಮಣಿ, ಅಮೀನ್ ಮೊಹಿಸಿನ್, ಮಂಜುಳಾ, ಉಷಾ ಕಾವೇರಪ್ಪ, ಚಂದ್ರಶೇಖರ, ಶಾರದ ನಾಗರಾಜು, ಜಗದೀಶ್, ಜುಲೇಕಾಬಿ, ಮುತ್ತು ರಾಜ್, ಚಂದ್ರಶೇಖರ್, ಸದಾಮುದ್ದಪ್ಪ, ಪ್ರಮುಖರಾದ ಟಿ.ಪಿ.ರಮೇಶ್, ಎಚ್.ಎಲ್. ದಿವಾಕರ, ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ಪ ಹಾನಗಲ್ಲು, ಅಂಬೆಕಲ್ಲು ಕುಶಾಲಪ್ಪ, ಅಂಬೆಕಲ್ಲು ನವೀನ್, ಮೋಹನ್ ಮೌರ್ಯ, ಬಿ.ಬಿ.ಭಾರತೀಶ್, ಚುಮ್ಮಿ ದೇವಯ್ಯ, ವಿ.ಕೆ. ಲೋಕೇಶ್, ಹಂಸ, ಗಾಯತ್ರಿ, ಪ್ರೇಮ, ಪ್ರಕಾಶ್ ಆಚಾರ್ಯ, ಬೇಕಲ್ ರಾಮನಾಥ್, ಪ್ರೇಮಕುಮಾರ್, ವೀರಭದ್ರಯ್ಯ, ಈರಪ್ಪ, ಕೂಡಿಗೆ ಅಣ್ಣಯ್ಯ, ಪೌರಾಯುಕ್ತÀ ಎಚ್.ಆರ್.ರಮೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ಇಂಜಿನಿಯರ್‌ಗಳಾದ ಪ್ರಮೋದ್, ಸತೀಶ್ ಇತರರು ಇದ್ದರು.

ಬಳಿಕ ಮಾತನಾಡಿದ ಶಾಸಕರು ಹಲವು ದಶಕಗಳ ಹೋರಾಟದ ನಂತರ ಜಿಲ್ಲಾ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವಾಗುತ್ತಿದೆ ಎಂದರು.

ಪ್ರತಿಮೆ ನಿರ್ಮಾಣಕ್ಕೆ ೪೪ ಲಕ್ಷ ರೂ ವೆಚ್ಚವಾಗಲಿದ್ದು, ನಗರಸಭೆಯಿಂದ ೨೦ ಲಕ್ಷ ನೀಡಲಾಗುತ್ತಿದೆ. ಜೊತೆಗೆ ಶಾಸಕರ ನಿಧಿಯಿಂದ ಅನುದಾನ ಭರಿಸಲಾಗುವುದು. ದಾನಿಗಳು ಸಹ ಸ್ವಯಂ ಪ್ರೇರಣೆಯಿಂದ ಅಗತ್ಯ ಸಹಕಾರ ನೀಡಬಹುದಾಗಿದೆ.

ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಿ ಏಪ್ರಿಲ್ ೧೪ ರಂದು ಉದ್ಘಾಟಿಸುವಂತಾಗಬೇಕು. ಆ ನಿಟ್ಟಿನಲ್ಲಿ ಇಂಜಿನಿಯರ್‌ಗಳು ಕ್ರಮವಹಿಸುವಂತೆ ಸೂಚಿಸಿದರು.

ಜಿಲ್ಲೆಯ ಕೊಡ್ಲಿಪೇಟೆಯಲ್ಲಿಯೂ ಸಹ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮನವಿ ಇದ್ದು, ಪ್ರಯತ್ನಿಸಲಾಗುವುದು ಎಂದರು.

ಎಲ್ಲರೂ ಸಂಘಟಿತರಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಆ ದಿಸೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಮಾತನಾಡಿ, ಅಂಬೇಡ್ಕರ್ ಅವರ ಬರಹ ಹಾಗೂ ಭಾಷಣಗಳ ಅಧ್ಯಯನ ಮಾಡಬೇಕು. ಅಂಬೇಡ್ಕರ್ ಅವರ ಅಧ್ಯಯನ ಮತ್ತು ದೂರದೃಷ್ಟಿಯನ್ನು ತಿಳಿಯುವಂತಾಗಬೇಕು ಎಂದರು.

ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಆಸ್ತಿಯಾಗಿದ್ದು, ಅವರು ರಾಷ್ಟ್ರಕ್ಕೆ ನೀಡಿರುವ ಕಾನೂನು, ಸಂವಿಧಾನ, ಕಾರ್ಮಿಕರು ಮತ್ತು ಮಹಿಳೆಯರಿಗೆ ನೀಡಿರುವ ಹಕ್ಕುಗಳ ಕೊಡುಗೆ ಅಪಾರ ಎಂದು ವರ್ಣಿಸಿದರು.

ಕುಶಾಲನಗರದ ಲೋಕೇಶ್ ಮತ್ತು ತಂಡದವರು ಅಂಬೇಡ್ಕರ್ ಕುರಿತು ಹಾಡು ಹಾಡಿದರು.