ಮಡಿಕೇರಿ, ಡಿ. ೮: ಬ್ರಹ್ಮಗಿರಿ ಸಹೋದಯ ಒಕ್ಕೂಟದ ವತಿಯಿಂದ ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಸೈನಿಕ ಶಾಲೆ ಕೊಡಗು, ಕ್ರೆಸೆಂಟ್ ಶಾಲೆ ಮಡಿಕೇರಿ, ಅಂಕುರ್ ಪಬ್ಲಿಕ್ ಶಾಲೆ ನಾಪೋಕ್ಲು ಎಸ್‌ಎಮ್‌ಎಸ್ ವಿದ್ಯಾಪೀಠ ಅರಮೇರಿ, ನ್ಯಾಷನಲ್ ಅಕಾಡೆಮಿ ಗೋಣಿಕೊಪ್ಪ, ಸೆಂಟ್ ಆ್ಯನ್ಸ್ ಕಾನ್ವೆಂಟ್ ಸಿದ್ದಾಪುರ ಮತ್ತು ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ಸುಳ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮುಖ್ಯ ಅತಿಥಿ ಮಡಿಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಆರ್.ಪಿ. ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.

ಗೌರವ ಅತಿಥಿಯಾಗಿ ಆಗಮಿಸಿದ ಅತ್ತೂರು ನ್ಯಾಷನಲ್ ಅಕಾಡಮಿ ಪ್ರಾಂಶುಪಾಲೆ ಪುಷ್ಪ ಸುಬ್ಬಯ್ಯ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ, ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಡಗಿರುವ ಅನನ್ಯ ಪ್ರತಿಭೆಯನ್ನು ಗುರುತಿಸುವುದು ಅತ್ಯಂತ ಮುಖ್ಯವೆಂದು ಅವರು ತಿಳಿಸಿದರು.

ಪ್ರಾಥಮಿಕ ಮಟ್ಟದ ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಬಾಲಕಿಯರ ವಿಭಾಗದಲ್ಲಿ ದೀಪಿಕಾ ಡಿ.ಡಿ., ಬಾಲಕರ ವಿಭಾಗದಲ್ಲಿ ತಿಮ್ಮಯ್ಯ ಎಂ.ಕೆ., ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಇರ್ಶಾನ್, ಬಾಲಕಿಯರ ವಿಭಾಗದಲ್ಲಿ ಹಿತ ಎನ್.ಬಿ. ಅವರು ಪಡೆದುಕೊಂಡರು. ಆತಿಥೇಯ ಕೊಡಗು ವಿದ್ಯಾಲಯ ಚಾಂಪಿಯನ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಕೊಡಗು ವಿದ್ಯಾಲಯದ ಪ್ರಾಂಶುಪಾಲ ರಾದ ಸುಮಿತ್ರಾ ಕೆ.ಎಸ್.ಆಡಳಿತಾಧಿಕಾರಿ ರವಿ ಪಿ., ದೈಹಿಕ ಶಿಕ್ಷಣ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.