ಮಡಿಕೇರಿ ಡಿ. ೧೬: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತಯಾರಿ ಮಾಡಿಕೊಳ್ಳುವಲ್ಲಿ ವಾರ್ತಾ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹಾಸನ ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಆಯುಕ್ತೆ ಕೆ.ಕೆ. ಸುಮಿತ ಅಭಿಪ್ರಾಯಪಟ್ಟರು.
ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಮಾಜಿ ಉಪನ್ಯಾಸಕಿಯೂ ಆದ ಕೆ.ಕೆ. ಸುಮಿತಾ, ವಿದ್ಯಾರ್ಥಿಗಳಿಗೆ ಗುರಿ ಮತ್ತು ಛಲ ಎರಡೂ ಇರಬೇಕು. ಪ್ರಚಲಿತ ವಿದ್ಯಮಾನ ಮತ್ತು ವಾರ್ತಾ ಪತ್ರಿಕೆಯಲ್ಲಿನ ಮುಖ್ಯಾಂಶಗಳನ್ನು ಬರೆದಿಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಸೂಕ್ತ ತಯಾರಿ ನಡೆಸಿಕೊಳ್ಳಬೇಕು. ಸತತ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕರ್ನಲ್ ಬಿ.ಈ.ವಿ. ಕುಮಾರ್ ಮಾತನಾಡಿ, ಇಂದಿನ ಮಕ್ಕಳು ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಸಂಸ್ಥೆಯ ವರದಿಯನ್ನು ಪ್ರಾಂಶುಪಾಲ ಸಿ..ಜಿ ಮಂದಪ್ಪ ವಾಚಿಸಿದರು. ಈ ಸಂದರ್ಭ ಶೈಕ್ಷಣಿಕ ಸಾಧಕರಿಗೆ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಅಜಿತ್ ಅಪ್ಪಚ್ಚು, ಕಾರ್ಯದರ್ಶಿ ಎಂ.ಬಿ. ಬೋಪಣ್ಣ ಹಾಗೂ ಸದಸ್ಯರಾದ ಬೋಜಮ್ಮ, ಪ್ರಕಾಶ್, ವಾಣಿಜ್ಯ ಇಲಾಖೆಯ ನಿವೃತ್ತ ಅಡಿಷನಲ್ ಕಮಿಷನರ್ ಬಿ.ಎ. ನಾಣಿಯಪ್ಪ, ಮಂಜುನಾಥ ಹಾಜರಿದ್ದರು.
ಸಂಸ್ಥೆಯ ಉಪನ್ಯಾಸಕ ರಾಜ ಸುಂದರA ಸ್ವಾಗತಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ರೀಟಾ ವಂದಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಅಶ್ವದಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸ್ನೇಹ ನಿರೂಪಿಸಿದರು.
ಚೆನ್ನಮ್ಮ ಸಂಸ್ಥೆಯ ಅಂಗ್ಲ ಮಾಧ್ಯಮದ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾ ಬೋಪಣ್ಣ, ಮಿಮ್ಮಿ ಚಿಟ್ಟಿಯಣ್ಣ ಸಂಸ್ಥೆಯ ನಿವೃತ್ತ ಶಿಕ್ಷಕರು, ಪೋಷಕರು, ಹಳೇ ವಿದ್ಯಾರ್ಥಿಗಳು ಹಾಜರಿದ್ದರು. ಆಂಗ್ಲ ಮಾಧ್ಯಮದ ಪುಟಾಣಿಗಳಿಂದ , ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.