ಕುಶಾಲನಗರ, ಡಿ. ೨೧: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಕೊಡಗು-ಮೈಸೂರು ಗಡಿಭಾಗದ ಕಾವೇರಿ ನದಿ ಸೇತುವೆ ಪ್ರವೇಶ ದ್ವಾರದಲ್ಲಿ ಸ್ವಾಗತ ಫಲಕ ಅಳವಡಿಸಲಾಯಿತು.

ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಅವರು ಕೈಮುಗಿದು ಒಳಗೆ ಬಾ ಯಾತ್ರಿಕನೆ ಎಂಬ ಘೋಷವಾಕ್ಯ ಹೊಂದಿರುವ ಸ್ವಾಗತ ಫಲಕವನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸೇವಾ ಸಂಘ - ಸಂಸ್ಥೆಗಳು ಸ್ವಚ್ಛ ಕೊಡಗು - ಸ್ವಚ್ಛ ಕಾವೇರಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಸಾರ್ವಜನಿಕರಿಗೆ ನಿರಂತರ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಟಿ. ನಾರಾಯಣ ಮಾತನಾಡಿ, ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಈ ಸಂದರ್ಭ ಜಿಲ್ಲೆಯ ಹಾಗೂ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ವಿಶೇಷವಾಗಿ ಕಾವೇರಿ ನದಿ ಕಲುಷಿತ ಆಗದಂತೆ ಪ್ರತಿಯೊಬ್ಬರು ಎಚ್ಚರವಹಿಸಬೇಕಾಗಿದೆ ಎಂದರು.

ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ಎಂ..ಜಿ ಕಿರಣ್, ಉಪಾಧ್ಯಕ್ಷ ನಿತಿನ್ ಗುಪ್ತ, ಹಿಂದಿನ ಅಧ್ಯಕ್ಷರುಗಳಾದ ಕೊಡಗನ ಹರ್ಷ, ಕೆ.ಎಸ್. ಸತೀಶ್ ಕುಮಾರ್, ಟಿ.ಕೆ. ರಾಜಶೇಖರ್, ವಿ.ಎಸ್. ಸುಮನ್ ಬಾಲಚಂದರ್, ಡಾ. ಪ್ರವೀಣ್ ದೇವರಗುಂಡ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮತ್ತು ಸದಸ್ಯರುಗಳು ಇದ್ದರು.