ನಾಪೋಕ್ಲು, ಜ. ೭: ಸಂಪಾಜೆಯ ಶ್ರೀ ಆಂಜನೇಯ ಫ್ರೆಂಡ್ಸ್ ನೇತೃತ್ವದಲ್ಲಿ ಹೊಸ ವರ್ಷದ ಪ್ರಯುಕ್ತ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಪುರುಷರ ಲೆವೆಲ್ ಹಾಗೂ ಗ್ರಿಪ್ ಮಾದರಿಯ ೫೨೫ ಕೆ.ಜಿ. ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯ ಫುಲ್ ಗ್ರಿಪ್ ಪಂದ್ಯಾಟದಲ್ಲಿ ಮಣಿಕಂಠ ಉಜಿರೆ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಸ್ವಾಮಿ ಕೊರಗಜ್ಜ ಪಾಲಡ್ಕ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ತೃತೀಯ ಸ್ಥಾನವನ್ನು ಮಣಿಕಂಠ ಉಜಿರೆ-ಬಿ ತಂಡ ಹಾಗೂ ಚತುರ್ಥ ಸ್ಥಾನವನ್ನು ಸಂಪಾಜೆಯ ವಿಷ್ಣು ಬಳಗ ತಂಡ ಪಡೆದುಕೊಂಡಿತು. ಸಿಂಗಲ್ ಗ್ರಿಪ್ ೫೨೫ ಕೆ.ಜಿ. ವಿಭಾಗದಲ್ಲಿ ಬಂಟ್ವಾಳದ ಶ್ರೀ ದುರ್ಗಾ ಫ್ರೆಂಡ್ಸ್ ಕೊರಗಟ್ಟೆ ತಂಡ ಪ್ರಥಮ ಸ್ಥಾನ ಗಳಿಸಿತು. ಸ್ವಾಮಿ ಕೊರಗಜ್ಜ ಪಾಲಡ್ಕ ತಂಡ ದ್ವಿತೀಯ ಸ್ಥಾನಕ್ಕೆ ಭಾಜನವಾದರೆ, ಶ್ರೀ ಸಾಯಿ ಫ್ರೆಂಡ್ಸ್ ಮೊಗರು ಬಂದರು ತೃತೀಯ ಸ್ಥಾನ ಪಡೆಯಿತು. ಬಂಟ್ವಾಳದ ಶ್ರೀ ದುರ್ಗಾ ಫ್ರೆಂಡ್ಸ್ ಕೊರಗಟ್ಟೆ ತಂಡ ಚತುರ್ಥ ಸ್ಥಾನ ಗಳಿಸಿತು. ಲೆವೆಲ್ ಮಾದರಿ ೫೨೫ ಕೆ.ಜಿ. ವಿಭಾಗದಲ್ಲಿ ಹೆಚ್‌ಎಂಟಿಸಿ ಸುಳ್ಯ ಪ್ರಥಮ ಸ್ಥಾನಗಳಿಸಿತು. ದುಗಳಡ್ಕ ಫ್ರೆಂಡ್ಸ್ ದ್ವಿತೀಯ ಸ್ಥಾನ ಗಳಿಸಿದರೆ, ತೃತೀಯ ಸ್ಥಾನ ಜಟಾಯು ವಿಟ್ಲ ತಂಡ ಗಳಿಸಿತು. ಚತುರ್ಥ ಸ್ಥಾನ ಹೆಚ್‌ಎಂಟಿಸಿ ಸುಳ್ಯ-ಬಿ ತಂಡದ ಪಾಲಾಯಿತು.

ಕೊಡಗು ಜಿಲ್ಲೆಗೆ ಸೀಮಿತ ಹಗ್ಗಜಗ್ಗಾಟ ಪಂದ್ಯಾಟ ೫೨೫ ಕೆ.ಜಿ. ವಿಭಾಗದಲ್ಲಿ ಸಂಪಾಜೆಯ ಶ್ರೀ ವಿಷ್ಣು ತಂಡ ಗಳಿಸಿದರೆ ದ್ವಿತೀಯ ಸ್ಥಾನವನ್ನು ಸಂಪಾಜೆಯ ಸ್ವಾಮಿ ಕೊರಗಜ್ಜ ತಂಡ ಗಳಿಸಿತು. ತೃತೀಯ ಸ್ಥಾನ ಆದರ್ಶ್ ಫ್ರೆಂಡ್ಸ್ ಚೆಡವು ತಂಡದ ಪಾಲಾಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಸಂಪಾಜೆ ಪದವಿಪೂರ್ವ ಕಾಲೇಜಿನ ನಿವೃತ್ತ ಅಧ್ಯಾಪಕ ಕೆ.ಆರ್. ವಿಠಲ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಶಾಂಕ್ ರೈ, ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚೆದ್ಕರ್, ಕೊಯನಾಡಿನ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಪಿ.ಡಿ. ವಿಶ್ವನಾಥ್, ಕಲ್ಲುಗುಂಡಿಯ ಶ್ರೀ ಮಹಾವಿಷ್ಣು ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ, ಸಂಪಾಜೆ ಪೊಲೀಸ್ ಉಪಠಾಣೆಯ ಪಿಎಸ್‌ಐ ಕುಮಾರ್ ಬಿ.ಕೆ., ಸಂಪಾಜೆ ವಲಯ ಕ್ರೈಸ್ತ ಸಮುದಾಯ ಸಂಘದ ಅಧ್ಯಕ್ಷ ಸಂತೋಷ್, ಕೊಯನಾಡಿನ ಸುನ್ನಿ ಮುಸ್ಲಿಂ ಜುಮಾ ಮಸೀದಿಯ ಅಧ್ಯಕ್ಷ ಮೊಯಿದಿನ್, ಶ್ರೀ ಆಂಜನೇಯ ಫ್ರೆಂಡ್ಸ್ ಅಧ್ಯಕ್ಷ ಧನಂಜಯ ಗಬಲಡ್ಕ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಸುಪ್ರಿತಾ ಹೆಚ್.ಆರ್. ಹಾಗೂ ಆರೋಗ್ಯ ಕೇಂದ್ರದ ವೈದ್ಯ ಶಶಾಂಕ್ ರೈ ಅವರನ್ನು ಸನ್ಮಾನಿಸಲಾಯಿತು.