ಸೋಮವಾರಪೇಟೆ, ಜ. ೧೦: ಕೃಷಿ ಇಲಾಖೆಯಿಂದ ರೈತರಿಗೆ ಬೋರ್‌ವೆಲ್ ಕೊರೆಯಿಸಲು ರೂ. ೨೫ ಸಾವಿರ ಸಹಾಯಧನವನ್ನು ನೀಡುವ ಯೋಜನೆಯ ಫಲಾನುಭವಿಗಳಿಗೆ ಶಾಸಕ ಡಾ. ಮಂತರ್ ಗೌಡ ಅವರು ಕಾರ್ಯಾದೇಶ ಪತ್ರ ವಿತರಿಸಿದರು.

ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ೩೧ ಮಂದಿ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕರು, ಕೃಷಿ ಕಾರ್ಯಗಳಿಗೆ ನೀರಾವರಿ ಅಗತ್ಯವಾಗಿದ್ದು, ಇದಕ್ಕಾಗಿ ಬೋರ್‌ವೆಲ್ ಕೊರೆಯಿಸಲು ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ.

ಕೃಷಿಕರು ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರಿ ಸೌಲಭ್ಯ ಪಡೆಯಲು ಯಾರೂ ಸಹ ಅಧಿಕಾರಿಗಳಿಗೆ ಹಣ ನೀಡುವ ಅಗತ್ಯವಿಲ್ಲ ಎಂದರು.

ಕೃಷಿ ಸಿಂಚಾಯಿ ಯೋಜನೆಯ ಇತರ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗಳಿಗೆ ರೂ. ೨೫ ಸಾವಿರ ಸಹಾಯಧನ ಒದಗಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಶೇ. ೬೦ ಹಾಗೂ ರಾಜ್ಯ ಸರ್ಕಾರದ ಶೇ. ೪೦ರ ಅನುಪಾತದಲ್ಲಿ ಯೋಜನೆಯನ್ನು ಕೃಷಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿದೆ.

ಈ ಸಂದರ್ಭ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ, ಕೃಷಿ ಅಧಿಕಾರಿ ಕವಿತಾ, ಪ್ರಮುಖರಾದ ಬಿ.ಬಿ. ಸತೀಶ್, ವಿ.ಎ. ಲಾರೆನ್ಸ್, ಡಿ.ಯು. ಕಿರಣ್, ವಿನಿ, ಮಂಜುನಾಥ್ ಸೇರಿದಂತೆ ಇತರರು ಇದ್ದರು.