ಮಡಿಕೇರಿ ಮೇ ೨೭ : ರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಒಳಿತಿಗಿಂತ ಅಧಿಕಾರವೇ ಮುಖ್ಯವಾಗಿದೆ. ಜನರ ಜೀವನ ಹಾಳಾದರೂ ಪರವಾಗಿಲ್ಲ, ನಾವು ಅಧಿಕಾರಕ್ಕೆ ಬರಬೇಕೆನ್ನುವುದು ರಾಜಕೀಯ ಪಕ್ಷಗಳ ಹಂಬಲವಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ಕಾನೂನು ಸಲಹೆಗಾರ ಹಾಗೂ ಹಿರಿಯ ವಕೀಲ ಕೆ.ಪಿ. ಬಾಲಸುಬ್ರಮಣ್ಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಮಹದೇವಪೇಟೆಯ ಎ.ವಿ ಶಾಲೆಯ ಬಳಿ ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಆಮ್ ಆದ್ಮಿ ಪಾರ್ಟಿ” ಹೆಸರೇ ಸೂಚಿಸುವಂತೆ ಈ ಪಕ್ಷಕ್ಕೆ ಸಾಮಾನ್ಯ ಜನರೇ ಮುಖ್ಯವಾಗಿದ್ದಾರೆ. ಇಲ್ಲಿ ಕುಟುಂಬ ರಾಜಕಾರಣವಿಲ್ಲ, ಇದು ಪಾರ್ಟಿಯ ಸಿದ್ಧಾಂತವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಈ ದೇಶದ ಅಭಿವೃದ್ಧಿಯಾಗುತ್ತದೆ ಎನ್ನುವ ಬಗ್ಗೆ ನಂಬಿಕೆ ಇಲ್ಲ. ಕಳೆದ ೧೦ ದಿನಗಳ ಅವಧಿಯಲ್ಲಿ ೪ ಬಾರಿ ಇಂಧನ ಬೆಲೆ ಏರಿಕೆ ಮಾಡಲಾಗಿದ್ದು, ಜನಸಾಮಾನ್ಯರಿಗೆ ಇಂಧನವೂ ದೊರಕದ ಪರಿಸ್ಥಿತಿ ಕಾಣುತ್ತಿದ್ದೇವೆ. ಸಾಮಾನ್ಯರ ಜೀವನ ಹಾಳಾದರೂ ಪರವಾಗಿಲ್ಲ, ನಾವು ಅಧಿಕಾರಕ್ಕೆ ಬರಬೇಕೆಂದು ರಾಜಕೀಯ ಪಕ್ಷಗಳು ಹಾತೊರೆಯುತ್ತಿವೆ ಎಂದರು.

ಗುಜರಾತ್ ರಾಜ್ಯದ ನರ್ಮದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೇರುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಹಿಡಿತದಿಂದ ಕ್ಷೇತ್ರವನ್ನು ಮುಕ್ತಗೊಳಿಸಿದೆ. ಚುನಾವಣೆ ಹೊರತಾಗಿಯೂ ಜನಸಾಮಾನ್ಯರಿಗೆ ಆಮ್ ಆದ್ಮಿ ಪಾರ್ಟಿ ಸ್ಪಂದಿಸುವ ಮೂಲಕ ಸಾರ್ವಜನಿಕರ ಜೊತೆಯಲ್ಲಿ ನಾವಿದ್ದೇವೆ ಎಂಬ ಸಂದೇಶ ಹೋಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಎಂ.ಕೆ. ಅಪ್ಪಯ್ಯ ಮಾತನಾಡಿ, ನೂತನ ಕಚೇರಿಯನ್ನು ಆರಂಭಿಸುವ ಮೂಲಕ ಕೊಡಗು ಜಿಲೆಯಲ್ಲೂ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು ಪಕ್ಷದ ಕಚೇರಿಗೆ ಆಗಮಿಸಿ ತಮ್ಮ ಕುಂದು ಕೊರತೆಗಳನ್ನು ದಾಖಲಿಸಬಹುದು. ಪಕ್ಷದ ವತಿಯಿಂದ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಆಮ್ ಆದ್ಮಿ ಪಾರ್ಟಿಯ ಮೈಸೂರು ಜಿಲ್ಲಾಧ್ಯಕ್ಷ ಎಲ್.ರಂಗಯ್ಯ, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ಪೃಥ್ವಿ, ಪ್ರಮುಖರಾದ ಆಶಿಕ್, ರಿಯಾಝ್, ರಫೀಕ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.