ಕೂಡಿಗೆ, ಆ ೧: ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ರೈತರಿಗೆ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ತರಬೇತಿ ಹಾಗೂ ಪ್ರಾತ್ಯಕ್ಷಿತೆ ತರಬೇತಿ ಕಾರ್ಯಾಗಾರ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಜಿಲ್ಲಾ ಸಹಾಯಕ ನಿರ್ದೇಶಕ ಸೋಮಶೇಖರ್ ವಹಿಸಿದ್ದರು. ಸಭೆಯಲ್ಲಿ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಕುರಿತು ವಿಷಯ ಮಂಡನೆಯನ್ನು ಮಂಡ್ಯದ ವಿ.ಸಿ. ಫಾರಂನ ವಲಯ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಬಸವಲಿಂಗಯ್ಯ ಅವರು ಭತ್ತದ ಕೃಷಿಯಲ್ಲಿ ತೊಡಗುವ ಮುನ್ನ ಅನುಸರಿಸಬೇಕಾದ ಕ್ರಮಗಳು ಮತ್ತು ಅಧಿಕ ಬೆಳೆಯನ್ನು ತೆಗೆಯುವ ವಿಧಾನ ಸೇರಿದಂತೆ ಕೃಷಿ ಇಲಾಖೆಯ ಮಾಹಿತಿಯನ್ನು ತಿಳಿಸಿದರು.

ಯಂತ್ರಶ್ರೀ ಕಾರ್ಯಕ್ರಮದ ಕುರಿತು ಪ್ರಸ್ತಾವನೆಯನ್ನು ಜಿಲ್ಲಾ ಎಸ್.ಕೆ.ಡಿ.ಆರ್.ಡಿ.ಪಿ. ನಿರ್ದೇಶಕ ವಿಠಲ ಸಾಲಿಯಾನ್ ನೂತನ ಬೇಸಾಯದ ಯೋಜನೆಯ ಬಗ್ಗೆ ತಿಳಿಸಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕೂಡಿಗೆಯ ಕೃಷಿ ಸಹಾಯಕ ನಿರ್ದೇಶಕ ಪಿ. ಶಿವಮೂರ್ತಿ ಇಲಾಖೆಯ ಸದುಪಯೋಗ ಮತ್ತು ವಿವಿಧ ಸಮಗ್ರ ಕೃಷಿಯಲ್ಲಿ ತೊಡಗುವ ವಿಚಾರದ ಬಗ್ಗೆ ಹಂತ ಹಂತವಾಗಿ ವಿಷಯಗಳನ್ನು ತಿಳಿಸಿದರು. ತರಬೇತಿಯಲ್ಲಿ ಹಾಜರಿದ್ದ ನೂರಾರು ಪುರುಷ, ಮಹಿಳಾ ರೈತರಿಗೆ ಭತ್ತದ ನಾಟಿಯ ಬಗ್ಗೆ ಕೃಷಿ ಕೇಂದ್ರದ ಗದ್ದೆಯಲ್ಲಿ ಪ್ರಾತ್ಯಕ್ಷಿತೆಯನ್ನು ತಿಳಿಸಲಾಯಿತು.