ಕೂಡಿಗೆ, ಸೆ. ೨೦: ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಗತಿಕರು ಹಾಗೂ ವಿಶೇಷಚೇತನ ಕುಟುಂಬವೊAದಕ್ಕೆ ನಿರ್ಮಿಸಿಕೊಡಲು ಉದ್ದೇಶಿಸಿರುವ ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಂದರನಗರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಕುಶಾಲನಗರ ಜನತಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ವಿಶೇಷಚೇತನ ನಾದ್ಯ ಎಂಬವರ ಕುಟುಂಬಕ್ಕೆ ಟ್ರಸ್ಟ್ ವತಿಯಿಂದ ಸುಂದರನಗರ ಗ್ರಾಮದಲ್ಲಿ ೩ ಸೆಂಟ್ ಜಾಗ ಖರೀದಿ ಮಾಡಿ ಅಂದಾಜು ರೂ.೮.೫ ಲಕ್ಷ ವೆಚ್ಚದಲ್ಲಿ ವಸತಿ ಭಾಗ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

ಕೂಡಿಗೆ ಜುಮಾ ಮಸೀದಿ ಧರ್ಮಗುರು ಹೈದರಾಲಿ ಸಹದಿ ಹಾಗೂ ಟ್ರಸ್ಟ್ ಅಧ್ಯಕ್ಷ ಎಂ.ಎಚ್. ಮಹಮ್ಮದ್ ಹಾಗೂ ಪದಾಧಿಕಾರಿಗಳು ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ನೂತನ ಮನೆ ಅಡ್ಡಿಯಿಲ್ಲದೆ ಪೂರ್ಣವಾಗಲು ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಎಂ.ಎಚ್.ಮಹಮ್ಮದ್ ಮಾತನಾಡಿ, ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್ ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಜಾತಿ, ಭೇದ, ಧರ್ಮ ಮರೆತು ಸಮಾಜದಲ್ಲಿ ಬಡವರ ಹಾಗೂ ನಿರ್ಗತಿಕರ ಏಳಿಗೆಗೆ ಶ್ರಮಿಸುತ್ತಿದೆ. ಬಡ ಹೆಣ್ಣು ಮಕ್ಕಳಿಗೆ ಕಲ್ಯಾಣ ಭಾಗ್ಯ, ವಸತಿ ರಹಿತ ನಿರ್ಗತಿಕ ಕುಟುಂಬಗಳಿಗೆ ವಸತಿ ಭಾಗ್ಯ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ಮಾಡುತ್ತಾ ಬರಲಾಗಿದೆ ಎಂದರು.

ಸಮಾಜಸೇವಕ ಉದ್ಯಮಿ ದಾವೂದ್ ಮಾತನಾಡಿ, ಟ್ರಸ್ಟ್ ವತಿಯಿಂದ ಹಾಗೂ ದಾನಿಗಳ ಸಹಕಾರದಿಂದ ಬಡವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಅದೇ ರೀತಿ ಬಡ ಹೆಣ್ಣು ಮಗಳು ನಾದ್ಯಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದೇವೆ. ಈ ಪುಣ್ಯ ಕಾರ್ಯಕ್ಕೆ ದಾನಿಗಳು ಆರ್ಥಿಕ ಸಹಾಯ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಟ್ರಸ್ಟ್ ಕಾರ್ಯದರ್ಶಿ ಹೊಸಕೋಟೆ ಅಶ್ರಫ್ ಮಾತನಾಡಿದರು. ಈ ಸಂದರ್ಭ ಟ್ರಸ್ಟಿನ ಉಪಾಧ್ಯಕ್ಷ ಮೂಸಾ ಹಾಜಿ, ಪದಾಧಿಕಾರಿಗಳಾದ ಟಿ.ಪಿ. ನಾಸಿರ್, ಕಡಂಗ ಫಥಾ ಬಾಯಿ, ಕಂಬಿಬಾಣೆ ಮೋಯ್ದಿನ್ ಹಾಜಿ, ಕೆ.ಸಿ. ಮೊಹಿದ್ದೀನ್, ಎಂ.ಎಚ್, ಶರೀಫ್, ಕೆ.ಪಿ. ಬದ್ರುದ್ದೀನ್, ಸಲಾಂ, ಅಬ್ದುಲ್ ಸಲಾಂ, ಮಹಮ್ಮದ್ ಸಾಲಿ, ಪಿಒಪಿ ಶರೀಫ್ ಸೇರಿದಂತೆ ನಾದ್ಯ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.