ಪೊನ್ನಂಪೇಟೆ, ಸೆ. ೨೪: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿದಾಳಿ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದ ಆಂಗೋಡು ಎಂಬಲ್ಲಿ, ಬಾಚೀರ ಪೆಮ್ಮಯ್ಯ ಎಂಬರಿಗೆ ಗಬ್ಬದ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಮೇಯಲು ಕಟ್ಟಿದ್ದ ಸಂದರ್ಭ ಮಧ್ಯಾಹ್ನ ೩.೩೦ರ ಸಮಯದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಸುಮಾರು ೨೦ ಅಡಿ ದೂರ ಎಳೆದೊಯ್ದು ಸ್ವಲ್ಪ ಭಾಗ ತಿಂದು ಹಾಕಿದೆ.
ಘಟನೆ ಬಗ್ಗೆ ಗ್ರಾಮಸ್ಥ ಮುಕ್ಕಾಟೀರ ಸತೀಶ್ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣ ಘಟನಾ ಸ್ಥಳಕ್ಕೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ. ಎಂ ಶಂಕರ್, ಡಿಆರ್ಎಫ್ಓ ನಾಗೇಶ್ ಕುಮಾರ್, ಗಸ್ತು ಅರಣ್ಯ ಪಾಲಕ ಅಂಥೋನಿ ಪ್ರಕಾಶ್, ಸೋಮನಾಥ ಗೌಡ, ಆರ್ಆರ್ಟಿ ಸಿಬ್ಬಂದಿಗಳಾದ ಅಕಿಲ್, ಸುಬ್ರಮಣಿ, ಪುನೀತ್ ಕುಮಾರ್, ಶೇಷಾಂಕ್, ಕೌಶಿಕ್, ಶೈಲೇಶ್, ಮತ್ತಿತರರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಪಶು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಅವರು ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಹಸುವಿನ ಕಳೆಬರವನ್ನು ಹೂಳಲಾಯಿತು.
ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ. ಎಂ ಶಂಕರ್ ಅವರು ಘಟನಾ ಸ್ಥಳದಲ್ಲಿ ಹುಲಿಯ ಚಲನ ವಲನಗಳನ್ನು ಕಂಡು ಹಿಡಿಯಲು ೧೦ ಕ್ಯಾಮರಾಗಳನ್ನು ಅಳವಡಿಸಿ, ಕೂಂಬಿAಗ್ ನಡೆಸಲಾಗುವುದು. ಆದ್ದರಿಂದ ಗ್ರಾಮಸ್ಥರು, ತೋಟದ ಮಾಲೀಕರು, ಕಾರ್ಮಿಕರು ಹಾಗೂ ಶಾಲಾ ಮಕ್ಕಳು ಎಚ್ಚರದಿಂದ ಇರುವಂತೆ ತಿಳಿಸಿದರು. ಅಲ್ಲದೆ ಹುಲಿಯ ಚಲನವಲನ ಕಂಡು ಬಂದಲ್ಲಿ ಕೂಡಲೇ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭ ಗ್ರಾಮಸ್ಥರಾದ ಮುಕ್ಕಾಟೀರ ಶುಭಾ ಮುತ್ತಪ್ಪ, ಉಮೇಶ್, ಸತೀಶ್, ಗಿರೀಶ್, ಬಾಚೀರ ಶರಣು, ರೋನ್, ಸುರೇಶ್, ಲೋಕೇಶ್, ಮೋನೆ, ಮಂಜು, ಕಾಶಿ, ಪೆಮ್ಮಯ್ಯ, ಈಶ್ವರ, ಬೋಸು, ಉದಯ, ನೂರೇರ ಪ್ರಭು, ಇನ್ನಿತರರು ಇದ್ದರು.