ಸೋಮವಾರಪೇಟೆ, ಸೆ. ೨೮: ಬೆಂಗಳೂರಿನ ಶ್ರೀ ಜಗದ್ಗುರು ಮೌನೇಶ್ವರ ಶೈಕ್ಷಣಿಕ ಮತ್ತು ದತ್ತಿ ಟ್ರಸ್ಟ್ (ಜೆಎಸ್‌ಎಂ) ವತಿಯಿಂದ ಪಟ್ಟಣ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.

ಶ್ರೀ ಜಗದ್ಗುರು ಮೌನೇಶ್ವರ ಶೈಕ್ಷಣಿಕ ಮತ್ತು ದತ್ತಿ ಟ್ರಸ್ಟ್ನ ಪ್ರಮುಖರಾದ ನವೀನ್ ಅವರ ಮಾರ್ಗದರ್ಶನದಲ್ಲಿ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ನ ರತ್ನಮ್ಮ ಅವರು ಶಾಲಾ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬಾಟಲ್‌ಗಳು, ಕೊಡೆಗಳನ್ನು ವಿತರಿಸಿದರು.

ಶಾಲೆಯ ೨೫ ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದ ರತ್ನಮ್ಮ ಅವರು, ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು. ಈ ಶಾಲೆಯಲ್ಲಿ ಕಲಿತವರು ಸರ್ಕಾರಿ ಭೂ ವ್ಯಾಜ್ಯಗಳ ವಿಶೇಷ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹಲವಷ್ಟು ಮಂದಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಇದರೊಂದಿಗೆ ಸಮಾಜಮುಖಿ ಟ್ರಸ್ಟ್ಗಳೂ ಸಹ ವಿದ್ಯಾರ್ಥಿಗಳ ನೆರವಿಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಬಿ.ಎಂ. ಸತೀಶ್, ಸಹ ಶಿಕ್ಷಕರಾದ ಟಿ.ಹೆಚ್. ಸುಕುಮಾರ್, ಎಸ್.ಎಂ. ಮಂಜುನಾಥ್, ಪತ್ರಕರ್ತ ವಿಜಯ್ ಹಾನಗಲ್, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಇದ್ದರು.