ಮಡಿಕೇರಿ, ಅ. ೪ : ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳಿಗೆ ಬಹುಮಾನ ವಿತರಿಸುವ ಸಂದರ್ಭ ಉಂಟಾದ ಕಹಿ ಘಟನೆಗೆ ವಿಷಾದ ವ್ಯಕ್ತಪಡಿಸುವುದಲ್ಲದೆ ಸರ್ವರಲ್ಲಿ ಕ್ಷಮೆಯಾಚಿಸುವುದಾಗಿ ಮಡಿಕೇರಿ ದಸರಾ ದಶಮಂಟಪ ಸಮಿತಿ ತಿಳಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ದಶಮಂಟಪ ಸಮಿತಿಯ ಅಧ್ಯಕ್ಷ ಬಿ.ಎಂ. ಹರೀಶ್ ಅಣ್ವೇಕರ್, ಸಾರ್ವಜನಿಕರು, ಜನಪ್ರತಿನಿಧಿಗಳು, ದೇವಾಲಯ ಸಮಿತಿಗಳು ಹಾಗೂ ಸರ್ವ ಅಧಿಕಾರಿ ವರ್ಗದ ಸಹಕಾರದಿಂದ ಈ ಬಾರಿಯ ಮಡಿಕೇರಿ ದಸರಾ ಜನೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಆದರೆ ಕೊನೆಯ ದಿನ ವಿಜಯದಶಮಿಯಂದು ಬಹುಮಾನ ಘೋಷಿಸುವ ಸಂದರ್ಭ ಉಂಟಾದ ಘಟನೆ ಕುರಿತು ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಬೇಸರವಿದ್ದು, ದಶಮಂಟಪ ಸಮಿತಿಯ ಪರವಾಗಿ ಸರ್ವರಲ್ಲಿ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಲ್ಲೂ ಕ್ಷಮೆಯಾಚಿಸುತ್ತೇವೆ. ಪೊಲೀಸ್ ಇಲಾಖೆ ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದ್ದು, ಎಲ್ಲರ ಸುರಕ್ಷತೆಗೆ ಆದ್ಯತೆ ನೀಡಿದೆ.
ನಾಡಹಬ್ಬ ದಸರಾವನ್ನು ಯಾವುದೇ ಗೊಂದಲವಿಲ್ಲದೆ ಅತ್ಯಂತ ಶಾಂತಿಯುತವಾಗಿ ನಡೆಸಲು ಸರ್ವರೂ ಒಗ್ಗಟ್ಟಾಗಿ ಸೇರಿ ಸಮಗ್ರ ಚಿಂತನೆ ನಡೆಸಲಾಗುವುದು. ಬಹುಮಾನದ ಆಯ್ಕೆ ವಿಚಾರವಾಗಿ ನೂತನ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು. ಈ ಕ್ರಮಕ್ಕೆ ದಶಮಂಟಪ ಸಮಿತಿಗಳ ಒಪ್ಪಿಗೆಯನ್ನು ಪಡೆಯಲಾಗುವುದು ಎಂದು ಅಧ್ಯಕ್ಷ ಬಿ.ಎಂ. ಹರೀಶ್ ಅಣ್ವೇಕರ್ ತಿಳಿಸಿದ್ದಾರೆ.