ಕುಶಾಲನಗರ, ಡಿ. ೧೨: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ೨೦೨೫-೨೮ನೇ ಸಾಲಿನ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಿತ್ಯ ನಿರಂತರ ಸುದ್ದಿ ಮಾಡುವ ಪತ್ರಕರ್ತರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೈಜ ವರದಿಗಳ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲುವ ಸಂದರ್ಭ ಹಲವರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಸರಕಾರ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳಿಗೆ ಪತ್ರಕರ್ತರ ಸೇವೆ ಅನಿವಾರ್ಯವಾಗಿ ಅಗತ್ಯವಿದೆ. ದಿಟ್ಟ ವರದಿಗಳ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪತ್ರಕರ್ತರ ಸೇವೆ ಅನನ್ಯವಾದುದು ಎಂದರು. ಪತ್ರಿಕಾ ಪ್ರತಿನಿಧಿಗಳ ಬದುಕಿಗೆ ಭದ್ರತೆಯ ಅಗತ್ಯತೆ ಅನಿವಾರ್ಯವಾಗಿದೆ ಎಂದರು ಸಂಘಕ್ಕೆ ಕಟ್ಟಡ ನಿರ್ಮಿಸಲು ಅಗತ್ಯ ಸಹಕಾರ ಒದಗಿಸುವ ಭರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕುಶಾಲನಗರ ತಾಲೂಕು ರಚನೆಯಾದ ಬಳಿಕ ತಾಲೂಕು ಸಂಘವಾಗಿ ಮೇಲ್ದರ್ಜೆಗೇರಿದ ಕುಶಾಲನಗರ ಸಂಘ ನಿರಂತರ ಚಟುವಟಿಕೆಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಸಂಘದ ಸಾಮರ್ಥ್ಯ ರೂಪಿಸಿದೆ. ಸಂಘದ ವಿಚಾರದಲ್ಲಿ ಸರ್ವ ಸದಸ್ಯರು ಒಂದು ಕುಟುಂಬದAತೆ ಬಾಂಧ್ಯವ್ಯ ಹೊಂದುವ ಅಗತ್ಯವಿದೆ. ಈ ಮೂಲಕ ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದರು.
ರಾಜ್ಯ ಸಮಿತಿ ಸದಸ್ಯೆ ಬಿ.ಆರ್. ಸವಿತಾ ರೈ ಮಾತನಾಡಿ, ಸಂಘದಲ್ಲಿ ತಮಗೆ ದೊರೆತ ಹುದ್ದೆಯನ್ನು ಆಸಕ್ತಿಯೊಂದಿಗೆ ಬದ್ದತೆಯಿಂದ ನಿರ್ವಹಿಸಿದಲ್ಲಿ ಸಂಘವನ್ನು ದೊಡ್ಡಮಟ್ಟದಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ. ಪ್ರತಿಯೊಬ್ಬರು ತಮ್ಮ ಕೊಡುಗೆ ಮೂಲಕ ಸಂಘವನ್ನು ಬಲಪಡಿಸಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅನು ಕಾರ್ಯಪ್ಪ ಮಾತನಾಡಿ, ಗುಣಮಟ್ಟದ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಂಘ ಗುರುತಿಸಿಕೊಳ್ಳಬೇಕಿದೆ. ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಎಲ್ಲರೂ ಭಾಗಿಯಾಗುವುದು ಮುಖ್ಯವಾಗಿದೆ ಎಂದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕುಶಾಲನಗರ ಪದವಿಪೂರ್ವ ಕಾಲೇಜಿನ ಹಿರಿಯ ಗ್ರಂಥಾಲಯ ಅಧಿಕಾರಿ ನಂದೀಶ್ ಅವರು ನೂತನ ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ, ಮಾತನಾಡಿದರು. ಪತ್ರಕರ್ತರು ವಿರೋಧ ವಿಚಾರಗಳಿಗೆ ಅಂಜದೆ ಸಮಾಜಕ್ಕೆ ನೆರವಾಗುವ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಕರೆ ನೀಡಿದರು.
ತಾಲೂಕು ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ ಸಾಲಿನಲ್ಲಿ ಉತ್ತಮ ಕಾರ್ಯಚಟುವಟಿಕೆಗೆ ರಾಜ್ಯಮಟ್ಟದ ಪ್ರಶಸ್ತಿ ಕುಶಾಲನಗರ ತಾಲೂಕು ಸಂಘಕ್ಕೆ ದೊರೆತಿರುವುದು ಮಹತ್ಕಾರ್ಯ. ಪತ್ರಕರ್ತರು ಮಾರಾಟದ ವಸ್ತುವಾಗದೆ ದಿಟ್ಟ ವರದಿಗಳ ಮೂಲಕ ಸಮಾಜದ ಏರುಪೇರುಗಳ ಬಗ್ಗೆ ಗಮನಿಸುವಂತಾಗಬೇಕು. ಸಮಾಜಮುಖಿ ವರದಿಗಳ ಮೂಲಕ ಪತ್ರಕರ್ತರು ಸಮಾಜದ ಗಮನ ಸೆಳೆದು ಹಲವು ಪ್ರಶಸ್ತಿಗಳಿಗೆ ಭಾಜನಾಗಿರುವುದು ಅಭಿನಂದನೀಯ ಸಂಗತಿ. ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ನಮ್ಮ ಮುಂದಿನ ಗುರಿ ಎಂದರು. ನೂತನ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪದಗ್ರಹಣ ನಂತರ ಅಧಿಕಾರ ಹಸ್ತಾಂತರ ಮಾಡಿದರು.. ರಾಷ್ಟಿçÃಯ ಸಮಿತಿ ಸದಸ್ಯ ಪಾರ್ಥ ಚಿಣ್ಣಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿ, ನೂತನ ಆಡಳಿತ ಮಂಡಳಿಗೆ ಶುಭ ಕೋರಿದರು.
ತಾಲೂಕು, ಜಿಲ್ಲಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿಂದಿನ ಸಾಲಿನ ಆಡಳಿತ ಮಂಡಳಿ ಖಜಾಂಚಿ ಕುಡೆಕಲ್ ಗಣೇಶ್ ಪ್ರಾರ್ಥಿಸಿದರು, ಸದಸ್ಯರು ಹಾಗೂ ಜಿಲ್ಲಾ ಖಜಾಂಚಿ ಆಗಿರುವ ಸುನಿಲ್ ಪೊನ್ನೇಟಿ ಕಾರ್ಯಕ್ರಮ ನಿರೂಪಿಸಿದರು. ಹಿಂದಿನ ಸಾಲಿನ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರ ಮೋಹನ್ ಸ್ವಾಗತಿಸಿದರು, ಕಾರ್ಯದರ್ಶಿ ಕೆ.ಕೆ. ನಾಗರಾಜಶೆಟ್ಟಿ ವಂದಿಸಿದರು. ನಂತರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.