ಮಡಿಕೇರಿ, ಡಿ. ೧೭ : ಸಿಡಿಯದೇ ಬಿದ್ದಿದ್ದ ಪಟಾಕಿಯೊಂದನ್ನು ಶಾಲಾ ಬಾಲಕನೊಬ್ಬ ಸಿಡಿಸಲು ಪ್ರಯತ್ನಿಸಿ ತನ್ನ ತೋರು ಬೆರಳನ್ನು ಕಳೆದುಕೊಂಡ ದುರ್ಘಟನೆ ವೀರಾಜಪೇಟೆ ತಾಲೂಕಿನ ಕೈಕೇರಿಯಲ್ಲಿ ನಡೆದಿದೆ.

ಮೂಲತಃ ದೇವರಪುರ ಪೈಸಾರಿ ನಿವಾಸಿಯಾದ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹದಿನಾಲ್ಕು ವರ್ಷದ ಪವನ್ ಎಂಬ ಬಾಲಕ ಕೈಕೇರಿಯಲ್ಲಿರುವ ತನ್ನ ನೆಂಟರ ಮನೆಗೆ ಬಂದಾಗ ಹೊರಗೆ ಸಿಡಿಯದೇ ಬಿದ್ದಿದ್ದ ಟುಸ್ ಪಟಾಕಿಯೊಂದನ್ನು ತಂದು ಸಿಡಿಸುವ ಪ್ರಯತ್ನ ಮಾಡಿದ್ದಾನೆ.

ಆಕಸ್ಮಿಕವಾಗಿ ಎಡಗೈಯಲ್ಲಿ ಪಟಾಕಿ ಸಿಡಿದ ರಭಸಕ್ಕೆ ಕೈ ಜರ್ಜರಿತವಾಗಿ ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಎಲ್ಲಾ ಬೆರಳುಗಳು ತೀವ್ರವಾಗಿ ಜಖಂ ಆಗಿದ್ದು ಒಂದು ಬೆರಳು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಮಿಕ್ಕ ಬೆರಳುಗಳನ್ನು ಶಸ್ತçಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ.

ಸ್ಥಳೀಯರು ನೀಡಿದ ಮಾಹಿತಿ ಅನ್ವಯ ಆಸ್ಪತ್ರೆಗೆ ತೆರಳಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅವರು ಬೆಳಗಾವಿ ಅಧಿವೇಶನದಲ್ಲಿರುವ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣನವರಿಗೆ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

ಕೂಡಲೇ ಸ್ಪಂದಿಸಿದ ಪೊನ್ನಣ್ಣನವರು ಬಾಲಕನಿಗೆ ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಮೈಸೂರು ಅಥವಾ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ಜಿಲ್ಲಾ ಸರ್ಜನ್ ಅವರಿಗೆ ಸೂಚನೆ ನೀಡಿದ್ದಾರೆ.