ವೀರಾಜಪೇಟೆ, ಡಿ. ೨೧: ಬಿಳುಗುಂದ ಸರಕಾರಿ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಐನಂಡ ಪ್ರಕಾಶ್ ಗಣಪತಿ, ಲೀನಾ ಗಣಪತಿ ಹಾಗೂ ನಿವೃತ್ತ ಶಿಕ್ಷಕಿ ಸಾವಿತ್ರಿ ಹೆಚ್.ಜಿ. ಪಾಲ್ಗೊಂಡಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಡಾ. ರವಿ ಆರ್. ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಜ್ವಾಲಾಮುಖಿಯ ಮಾದರಿಯಲ್ಲಿ ಲಾವಾ ಹೊರಹೊಮ್ಮಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಗಣಿತದ ಆಕೃತಿಗಳನ್ನು ಮತ್ತು ವಿಜ್ಞಾನದ ಹಲವು ಮಾದರಿಗಳನ್ನು, ರಂಗೋಲಿಗಳನ್ನು ರಚಿಸಿ ಪ್ರದರ್ಶಿಸಿ, ಅದರ ಕಾರ್ಯ ವೈಖರಿಯನ್ನು ವೇದಿಕೆಯಲ್ಲಿ ಪ್ರದರ್ಶಿಸಿ ವಿವರಿಸಿದರು. ಅತಿಥಿಗಳು ವಿದ್ಯಾರ್ಥಿಗಳಿಗೆ ಪ್ರಯೋಗಗಳಲ್ಲಿ ಹಾಗೂ ಮಾದರಿಗಳ ನಿರ್ಮಾಣದಲ್ಲಿ ಇರುವ ಆಸಕ್ತಿಯನ್ನು ಕಂಡು ಅಭಿನಂದಿಸಿ, ಪ್ರೋತ್ಸಾಹಿಸಿದರು.

ಶಾಲೆಯ ಗಣಿತ ಶಿಕ್ಷಕಿ ಅರುಣ ಆನ್ಸಿ ಡಿಸೋಜಾ ಹಾಗೂ ವಿಜ್ಞಾನ ಶಿಕ್ಷಕಿ ರೂಪ ಕಡೇಮನಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ಲೀಲಾವತಿ ವಿ.ಕೆ., ಭವ್ಯ ಪಿ.ಎಸ್., ಅನಿತಾ ಎಸ್.ಡಿ. ಕಾರ್ಯಕ್ರಮ ನಿರ್ವಹಿಸಿದರು.

ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ ಪಿ.ಎನ್., ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪ್ರೌಢಶಾಲೆಯ ಸಹ ಶಿಕ್ಷಕಿಯರಾದ ಲಿನ್ನಿ ಎಸ್.ಜಿ. ಹಾಗೂ ಸವಿತಾ ಮಹದೇವ ನಾಯಕ ಕಾರ್ಯಕ್ರಮದಲ್ಲಿ ಹಾಜರಿದ್ದರು.