ನಾಪೋಕ್ಲು, ಜ. ೨೦: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಹಾಗೂ ಮದೆ ಪಂಚಾಯಿತಿ ವ್ಯಾಪ್ತಿಯ ಅವಂದೂರು ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಕ್ಷೇತ್ರದಾದ್ಯಂತ ರಸ್ತೆಗಳ ಅಭಿವೃದ್ಧಿಗೆ ಮನವಿಗಳ ಮಹಾಪೂರವೇ ಹರಿದು ಬರುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದು ಅದನ್ನು ಈಡೇರಿಸಲು ಬದ್ದನಾಗಿದ್ದೇನೆ ಎಂದರು. ಆದ್ಯತೆ ಮೇರೆಗೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ ಅವರು ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬೆಟ್ಟಗೇರಿ ಕೇಟೋಳಿ ಕಾರುಗುಂದ ರಸ್ತೆ , ಕಾಳೇರಮ್ಮನ ಕುಟುಂಬಸ್ಥರ ರಸ್ತೆ, ಕಡ್ಯದ ಕುಟುಂಬಸ್ಥರ ರಸ್ತೆ, ನಿಂಗಪ್ಪನ ಕುಟುಂಬದವರ ಮನೆಗೆ ಹೋಗುವ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು ಹೆರವನಾಡು ಮೇದರ ಸಮುದಾಯ ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ಸಂದರ್ಭ ಗ್ರಾಮಸ್ಥರಿಂದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರ ಮೈನಾ, ಬೆಟ್ಟಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೊಡಗನ ತೀರ್ಥ ಪ್ರಸಾದ್, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಳಿಯಂಡ ಕಮಲಾ ಉತ್ತಯ್ಯ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಹೊಸೂರು ಸೂರಜ್, ಡಿಸಿಸಿ ಸದಸ್ಯರಾದ ಕೇಟೋಳಿರ ಮೋಹನ್ ರಾಜ್, ಪಿ.ಎಲ್. ಸುರೇಶ್ ಸಂಪಾಜೆ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ್, ಪ್ರಮುಖರಾದ ಕಾಳೇರಮ್ಮನ ಕುಮಾರ್, ಬಾಳಾಡಿ ಪ್ರತಾಪ್ ಕುಮಾರ್, ಪೂಜಾರಿರ ಪ್ರದೀಪ್ ಕುಮಾರ್, ಪಟ್ಟಡ ದೀಪಕ್, ಮಜೀದ್ ಬೆಟ್ಟಗೇರಿ, ಶಾಹಿದ್ ಬೆಟ್ಟಗೇರಿ, ಕೋಡಿ ಮೋಟಯ್ಯ, ಅರಂಬೂರು ನಾಗೇಶ್, ಹನೀಫ್ ಸಂಪಾಜೆ ಸೇರಿದಂತೆ ಕೇಟೋಳಿ, ಕಾಳೇರಮ್ಮನ, ಕಡ್ಯದ, ನಿಂಗಪ್ಪನ ಕುಟುಂಬಸ್ಥರು, ಮೇದರ ಕಾಲೋನಿ ನಿವಾಸಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.