ಸೋಮವಾರಪೇಟೆ, ಜ. ೨೩: ಫೆ. ೯ ರಂದು ಐಗೂರು ಗ್ರಾಮದಲ್ಲಿ ನಡೆಯುವ ೯ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಸಾಹಿತಿ ಜಲಜಾ ಶೇಖರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಫಲತಾಂಬೂಲ ನೀಡಿ ಗೌರವಪೂರ್ವಕವಾಗಿ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.

ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ, ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ವೇದಿಕೆಯಾಗಿದ್ದು, ಜಲಜಾ ಶೇಖರ್ ಅವರಂತಹ ಅನುಭವಿ ಸಾಹಿತಿಯ ಸರ್ವಾಧ್ಯಕ್ಷತೆ ಸಮ್ಮೇಳನಕ್ಕೆ ವಿಶೇಷ ಘನತೆ ತರುತ್ತದೆ ಎಂದು ಹೇಳಿದರು.

ಕಾರ್ಯದರ್ಶಿಗಳಾದ ಎ.ಪಿ. ವೀರರಾಜು ಮತ್ತು ಜ್ಯೋತಿ ಅರುಣ್, ಖಜಾಂಚಿ ಕೆ.ಪಿ. ದಿನೇಶ್, ಮಾಜಿ ಅಧ್ಯಕ್ಷರುಗಳಾದ ಜೆ.ಸಿ. ಶೇಖರ್ ಹಾಗೂ ಎಚ್.ಜೆ. ಜವರಪ್ಪ, ಹೋಬಳಿ ಅಧ್ಯಕ್ಷರುಗಳಾದ ನಂಗಾರು ಕೀರ್ತಿ ಮತ್ತು ಸಿ.ಎಸ್. ನಾಗರಾಜು, ಹಿರಿಯರಾದ ತಿಮ್ಮಶೆಟ್ಟಿ, ಸುಮಾ ಸುದೀಪ್, ಅನಿತಾ ಅವರುಗಳು ಪಾಲ್ಗೊಂಡಿದ್ದರು.

ಜಲಜಾ ಶೇಖರ್ ಮಾತನಾಡಿ, ೯ನೇ ತಾಲೂಕು ಸಾಹಿತ್ಯ ಸಮ್ಮೇಳನವು ಕೇವಲ ಕಾರ್ಯಕ್ರಮವಲ್ಲ, ಕನ್ನಡ ಮನಸ್ಸುಗಳನ್ನು ಒಂದೆಡೆ ಸೇರಿಸುವ ಸಂಸ್ಕೃತಿಯ ಹಬ್ಬವಾಗಿದೆ ಎಂದರು. ಸಾಹಿತ್ಯ, ಭಾಷೆ ಮತ್ತು ನಾಡಿನ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಕನ್ನಡ ಸಾಹಿತ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ತಿಳಿಸಿದರು.