ಶ್ರೀಮಂಗಲ, ಜ. ೨೭: ಪೊನ್ನಂಪೇಟೆ ತಾಲೂಕು ಬಾಡಗರಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೧೨೫ನೇ ವರ್ಷ ಪೂರೈಸಿದ ಹಿನ್ನೆಲೆ ಸಂಭ್ರಮಾಚರಣೆ ನಡೆಯಿತು. ಶಾಲಾ ಆಡಳಿತ ಮಂಡಳಿ, ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳು, ಶಿಕ್ಷಕರ ಸಹಕಾರದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.
೧೨೫ನೇ ವರ್ಷದ ಸಂಭ್ರಮದ ನೆನಪಿಗಾಗಿ ಶಾಲೆಗೆ ಹೊಸದಾಗಿ ಆಟದ ಮೈದಾನವನ್ನು ನಿರ್ಮಿಸಿ, ಅದರ ಉದ್ಘಾಟನೆಯನ್ನು ಶಾಲೆಗೆ ಜಾಗದಾನ ನೀಡಿದ ಮಲ್ಲೇಂಗಡ ಕುಟುಂಬಸ್ಥರ ಪರವಾಗಿ ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಯಾದ ಮಲ್ಲೇಂಗಡ ದಾದಾ ಬೆಳ್ಯಪ್ಪ ಮತ್ತು ಗಾಂಧಿ ಕಾರ್ಯಪ್ಪ ಅವರು ನೆರವೇರಿಸಿದರು.
ಇದಕ್ಕೂ ಮೊದಲು ನಡೆದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಲ್ಯಮೀದೇರಿರ ಸಂಪತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮ ಅವರು ನೆರವೇರಿಸಿದರು.
ಆಟೋಟಗಳ ಸ್ಪರ್ಧೆಯನ್ನು ಶಾಲೆಯ ಆಡಳಿತ ಮಂಡಳಿಯ ಹಿರಿಯರಾದ ಮಲ್ಲೇಂಗಡ ಪೆಮ್ಮಯ್ಯ ಅವರು ಮಾಡಿದರು. ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳಿಂದ ಕವಾಯತು ಹಾಗೂ ದೈಹಿಕ ವ್ಯಾಯಾಮದ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ನಿಧಾನ ಬೈಕ್ ಚಾಲನೆ, ಭಾರದ ಗುಂಡು ಎಸೆತ, ಮ್ಯೂಸಿಕಲ್ ಚೇರ್, ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮೀದೇರಿರ ದಿವಂಗತ ನಂಜಪ್ಪ - ನಂಜಮ್ಮ ಅವರ ಜ್ಞಾಪಕಾರ್ಥವಾಗಿ ಮಕ್ಕಳು ಹಾಗೂ ಮೊಮ್ಮಕ್ಕಳು ಮಾಡಿದರು. ಮಧ್ಯಾಹ್ನದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ೯೦ ವರ್ಷಕ್ಕೂ ಮೀರಿದ ಹಿರಿಯರನ್ನು ಸನ್ಮಾನಿಸಲಾಯಿತು. ಇದಲ್ಲದೆ ಶಾಲೆಯಲ್ಲಿ ವ್ಯಾಸಂಗ ಮಾಡಿ ಸೇನೆಯಲ್ಲಿ ಸೇವೆ ಸಲ್ಲಿಸಿದ ೭೧ ಜನರನ್ನು ಹಾಗೂ ಮರಣಪಟ್ಟವರ ಪರವಾಗಿ ಅವರ ಪತ್ನಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಮಲ್ಲೇಂಗಡ ದಾದಾ ಬೆಳ್ಯಪ್ಪ ಅವರು ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಬಹಳಷ್ಟು ಹಿರಿಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ನಮ್ಮ ಹಿರಿಯರ ದೂರದೃಷ್ಟಿಯಿಂದ ೧೯೦೦ ಇಸವಿಯಲ್ಲಿ ಸ್ಥಾಪನೆ ಮಾಡಿದ ಈ ವಿದ್ಯಾಸಂಸ್ಥೆಗೆ ೧೨೫ ವರ್ಷವಾಗಿದ್ದು, ಈ ಪ್ರಯುಕ್ತ ಅರ್ಥಪೂರ್ಣವಾದ ಕಾರ್ಯಕ್ರಮ ಎಲ್ಲರ ಸಹಕಾರದಿಂದ ನಡೆದಿದೆ.
ಪ್ರಸ್ತುತ ಈ ಶಾಲೆಯನ್ನು ಸ್ಥಳೀಯ ಕಾರ್ಮಿಕರ ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಶಾಲೆಯನ್ನು ಉಳಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭ ದಾದಾ ಬೆಳ್ಯಪ್ಪ ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮ, ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಮೀದೇರಿರ ಕಾರ್ಯಪ್ಪ, ಮಲ್ಲೇಂಗಡ ಪೂಣಚ್ಚ, ಮಲ್ಲೇಂಗಡ ಗಾಂಧಿ ಕಾರ್ಯಪ್ಪ, ಶಾಲಾ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಲ್ಯಮೀದೇರಿರ ಸಂಪತ್, ಉಪಾಧ್ಯಕ್ಷ ಮೀದೇರಿರ ಮಂಜುನಾಥ್, ಖಜಾಂಚಿ ಕಾಯಪಂಡ ಸುನಿಲ್, ಟಿ. ಶೆಟ್ಟಿಗೇರಿ ಕ್ಲಸ್ಟರ್ ಸಿಆರ್ಪಿ ಕೋಪುಡ ಸೌಮ್ಯ, ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಅಮ್ಮತ್ತಿರ ರಾಜೇಶ್, ಸದಸ್ಯರಾದ ಮಲ್ಲೇಂಗಡ ರೀನಾ, ಗೌರಿ, ಕಾಳಿಯಮ್ಮ ದಾನಿಗಳಾದ ಬಲ್ಯಮೀದೇರಿರ ಶಿವಕುಮಾರ್, ಮೀದೇರಿರ ಪೆಮ್ಮಯ್ಯ, ಸಮಿತಿ ಸದಸ್ಯರಾದ ಅಣ್ಣೀರ ವಿಜು ಪೂಣಚ್ಚ, ಕಾಯಪಂಡ ಮಧು ಮೋಟಯ್ಯ, ಅಣ್ಣೀರ ಲೋಕೇಶ್, ಮಲ್ಲೇಂಗಡ ನರೇಂದ್ರ, ಅಣ್ಣೀರ ರೂಪ, ಅಣ್ಣೀರ ಮಿಥುನ, ಜಾಜಿ ಪೂಣಚ್ಚ, ಮಲ್ಲಿಗೆ ಪೂಣಚ್ಚ, ಮಲ್ಲೇಂಗಡ ಜಯ, ಪೂಜಾ ಲೋಕೇಶ್, ಬಲ್ಯಮೀದೇರಿರ ಕಾವೇರಮ್ಮ, ಕೌಶಿ ಮಂಜು, ಸರಸ್ವತಿ, ಮುಖ್ಯ ಪ್ರಬಾರ ಶಿಕ್ಷಕಿ ಆಶಾ ಮತ್ತಿತರರು ಹಾಜರಿದ್ದರು.
ದತ್ತಿನಿಧಿ ಮತ್ತು ವಿಜೇತರಿಗೆ ಬಹುಮಾನ ನೀಡಲಾಯಿತು. ಕ್ರೀಡಾಕೂಟದ ಬಹುಮಾನವನ್ನು ಮೃತ್ಯುಂಜಯ ದೇವಸ್ಥಾನ ಮುಖ್ಯ ಅರ್ಚಕ ಬಿ.ಎಸ್. ಗಿರೀಶ್ ಅವರ ಪ್ರಾಯೋಜಿಸಿದ್ದರು. ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನೂತನ ಮೈದಾನದಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆಯ ಭೋಜನ ವ್ಯವಸ್ಥೆಯನ್ನು ಬಲ್ಯಮೀದೇರಿರ ಅರುಣ ಮತ್ತು ಹೇಮಲತಾ ಅವರು ತಮ್ಮ ಪುತ್ರಿ ನಿಶ್ಚಿತ ಅವರ ಜ್ಞಾಪಕಾರ್ಥವಾಗಿ ಮಾಡಿದರು.