ಸೋಮವಾರಪೇಟೆ, ಫೆ. ೨೬: ನಿಜವಾದ ಮಾನವ ಧರ್ಮ ಹಿಂದೂ ಧರ್ಮವಾಗಿದೆ. ಹಿಂದೂ ಧರ್ಮವನ್ನು ರಕ್ಷಿಸಿದರೆ ಮಾತ್ರ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಕೊಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಹೇಳಿದರು.

ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ತಾಕೇರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಿರಗಂದೂರು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದೇಶಿಯರು ಭಾರತದ ಸಂಪತ್ತು ಕೊಳ್ಳೆ ಹೊಡೆಯುವುದರೊಂದಿಗೆ ಸಂಸ್ಕೃತಿ, ಸಂಪ್ರದಾಯವನ್ನು ನಾಶಮಾಡಲು ಯತ್ನಿಸಿದರು. ಇನ್ನಾದರೂ ಹಿಂದೂಗಳು ಒಂದಾಗಬೇಕು. ದೇವರು, ದೇವಸ್ಥಾನ, ಮಠಗಳ ಬಗ್ಗೆ ಗೌರವ, ನಂಬಿಕೆ ಇರಬೇಕು ಎಂದು ಹೇಳಿದರು.

ತಂದೆ ತಾಯಂದಿರು ಮಕ್ಕಳಿಗೆ ನೀತಿಪಾಠವನ್ನು ಹೇಳಿಕೊಡಬೇಕು. ಮಕ್ಕಳಿಗೆ ಹಿಂದೂ ಧರ್ಮ, ಸಂಸ್ಕೃತಿಯ ಬಗ್ಗೆ ಹೇಳಬೇಕು. ಮೊಬೈಲ್‌ಗಳಿಗೆ ದಾಸರಾಗಲು ಬಿಟ್ಟು ವಿದೇಶಗಳಲ್ಲಿ ಓದುವಂತೆ ಒತ್ತಡ ಹಾಕಿದರೆ, ಪೋಷಕರೇ ವೃದ್ಧಾಶ್ರಮಕ್ಕೆ ಸೇರಬೇಕಾಗುತ್ತದೆ. ಭಾರತದ ಶಿಕ್ಷಣ ಪವಿತ್ರವಾಗಿದೆ. ಇಲ್ಲಿಯೇ ಮಕ್ಕಳು ಬೆಳೆದು ಬದುಕಲು ಅವಕಾಶ ಮಾಡಿಕೊಡಿ ಎಂದು ತಿಳಿ ಹೇಳಿದರು.

ಧರ್ಮದಂತೆ ಬದುಕಿದರೆ ನೆಮ್ಮದಿ ಸಿಗುತ್ತದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಸ್ವಾಮೀಜಿ ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕುಟುಂಬ ಪ್ರಬೋಧನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಸುಬ್ರಾಯ ನಂದೋಡಿ ಮಾತನಾಡಿ, ಇಡೀ ಜಗತ್ತನ್ನು ಒಂದುಗೂಡಿಸುವ ಶಕ್ತಿ ಭಾರತಕ್ಕಿದೆ. ಹಿಂದೂಗಳು ಒಗ್ಗಟ್ಟಾಗಿ, ಸಾಮರಸ್ಯದಿಂದ ಬದುಕಿದರೆ ಬಲಿಷ್ಠ ಭಾರತವನ್ನು ಕಟ್ಟಬಹುದು ಎಂದು ಅಭಿಪ್ರಾಯಿಸಿದರು.

ಭಾರತದ ಒಂದು ತುದಿಯಲ್ಲಿ ಹಿಮಾಲಯ ಪರ್ವತವಿದೆ. ಮೂರು ಕಡೆ ಸಮುದ್ರವಿದೆ. ಪ್ರಾಕೃತಿಕವಾಗಿ ರಕ್ಷಣಾತ್ಮಕ ದೇಶವಾಗಿದೆ. ಅತೀ ಹೆಚ್ಚು ನದಿಗಳು ದೇಶದೊಳಗೆ ಹರಿಯುತ್ತವೆ. ಸಮೃದ್ಧವಾದ ಜಲ ಸಂಪತ್ತು, ಖನಿಜ ಸಂಪತ್ತು ಯಥೇಚ್ಚವಾಗಿದೆ. ವೇದ, ಉಪನಿಷತ್ತುಗಳ ಜ್ಞಾನ ಸಂಪತ್ತು ದೇಶಕ್ಕಿದೆ. ಸ್ವಾತಂತ್ರö್ಯ ಸಿಕ್ಕಿ ಶತಮಾನೋತ್ಸವ ಆಚರಿಸಲು ಇನ್ನೂ ಎರಡು ದಶಕಗಳು ಮಾತ್ರ ಉಳಿದಿದೆ. ಅಷ್ಟರೊಳಗೆ ಪ್ರಪಂಚಕ್ಕೆ ಮಾದರಿ ರಾಷ್ಟçವನ್ನು ನಾವೆಲ್ಲರೂ ಕಟ್ಟಬೇಕಿದೆ ಎಂದು ಹೇಳಿದರು.

ಸ್ವಾತಂತ್ರö್ಯ ಸಿಕ್ಕ ನಂತರ ದೇಶವನ್ನು ಆಳಬೇಕಾದ ಜವಾಬ್ದಾರಿಯುತ ಜನರನ್ನು ಸೃಷ್ಟಿಮಾಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡಿಕೊಂಡು ಬರುತ್ತಿದೆ. ಬಲಿಷ್ಠ ದೇಶವನ್ನು ಕಟ್ಟಲು ಬೇಕಾದ ಮಾನವ ಸಂಪತ್ತನ್ನು ನಿರ್ಮಾಣ ಮಾಡುವ ಕಾಯಕದಲ್ಲಿ ತೊಡಗಿದೆ. ಅಂತಹ ಕಾರ್ಯಕ್ರಮದ ಭಾಗವೇ ಹಿಂದು ಸಂಗಮ. ಇಂತಹ ಕಾರ್ಯಕ್ರಮಗಳನ್ನು ಹಿಂದೂಗಳೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿರುವುದು ಶ್ಲಾಘನೀಯ. ಹಿಂದೂಗಳು ಒಗ್ಗಟ್ಟಾಗುವ ಮೂಲಕ ಆರ್‌ಎಸ್‌ಎಸ್ ಕನಸನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಕಿರಗಂದೂರು ಮಂಡಲ ಅಧ್ಯಕ್ಷ ಹೆಚ್.ಪಿ. ಶಿವಕುಮಾರ್, ಕಾಫಿ ಬೆಳೆಗಾರ ಎಂ.ಪಿ. ಮುತ್ತಣ್ಣ, ಪ್ರಮುಖರಾದ ವಿಮಲ ಕೃಷ್ಣಕಾಂತ್ ಇದ್ದರು. ಸಮಿತಿಯ ಅಮೃತ್, ಸುಧೀರ್, ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳಿಂದ ಭರತನಾಟ್ಯ, ಯಕ್ಷಗಾನ, ಜಾನಪದ ನೃತ್ಯ, ಭಗವದ್ಗೀತೆ ಪಠಣ ನಡೆಯಿತು. ಕಿರಗಂದೂರು ಅಂಗನವಾಡಿಯಿAದ ಮಹಿಳೆಯರು ಕಲಶ ಹೊತ್ತು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.