ಕಣಿವೆ, ಮೇ ೪: ೧೨ನೇ ಶತಮಾನದಲ್ಲಿ ದೇವ ಭಾಷೆಯಾಗಿದ್ದ ಸಂಸ್ಕೃತ ಭಾಷೆಯನ್ನು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ರೀತಿಯಲ್ಲಿ ವಚನಗಳನ್ನು ಬರೆದು ಸಮಾಜದಲ್ಲಿ ಸಮಾನತೆ ತರಲು ಹೋರಾಡಿದ ಬಸವಾದಿ ಶರಣರ ಚಿಂತನೆಗಳನ್ನು ಎಲ್ಲರೂ ಅರಿಯುವ ಮೂಲಕ ಸರ್ವ ಸಮಾನತೆಯ ಹಾಗೂ ಅಭಿವೃದ್ಧಿಯ ಶೀಲ ದೇಶ ಕಟ್ಟಲು ಎಲ್ಲರೂ ಕೈಜೋಡಿಸಬೇಕೆಂದು ಸಾಮಾಜಿಕ ಚಿಂತಕ ಸೀಬಳ್ಳಿ ಸೋಮಶೇಖರ್ ಕರೆಕೊಟ್ಟರು. ಕೊಡಗು ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ತೊರೆನೂರು ವಿರಕ್ತಮಠದ ಆಶ್ರಯದಲ್ಲಿ ಮಠದ ಆವರಣದಲ್ಲಿ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಮಾಸಿಕ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಬಸವಣ್ಣ ಸಮಾನತೆಗಾಗಿ ಹಾಗೂ ಜನರ ಹಕ್ಕುಗಳಿಗಾಗಿ ಹೋರಾಡಿದರು. ಇಂದು ಜನರ ಹಕ್ಕುಗಳನ್ನು ನಿರ್ಲಕ್ಷಿಸಿ ಸ್ವಹಿತಾಸಕ್ತಿ ಗಳಿಗಾಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಅಸಮಾನತೆ ತಾಂಡವವಾಡುತ್ತಿದೆ.
ಈ ದೇಶದ ಶ್ರೇಷ್ಠ ಉದ್ಯಮಿ ಅಂಬಾನಿ ಅವರು, ಪ್ರಧಾನಿ ನರೇಂದ್ರ ಮೋದಿಗಿಂತಲೂ ಶ್ರೀಮಂತ. ಆದರೆ ಹಳ್ಳಿಯ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರ ಬಾಯಲ್ಲೂ ಮೋದಿಯ ಹೆಸರು ಬರುತ್ತದೆಯೇ ಹೊರತು ಅಂಬಾನಿಯ ಹೆಸರಲ್ಲ. ಅಂದರೆ ಸ್ವಾರ್ಥ ಹಾಗೂ ಸ್ವಹಿತ ಬಿಟ್ಟು ಸಮಾಜದ ಹಿತಕ್ಕೆ ತೊಡಗಿಸಿಕೊಳ್ಳುವ ಮಹನೀಯರು ಎಂದಿಗೂ ಎಲ್ಲರ ಮನದಲ್ಲಿ ಉಳಿಯುತ್ತಾರೆ. ಹಾಗೆಯೇ ಬಸವಾದಿ ಶರಣರು, ಶ್ರೇಷ್ಠ ಚಿಂತಕರು, ಸಾಹಿತಿಗಳು ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತಾರೆ ಎಂದು ಸೋಮಶೇಖರ್ ಆಶಿಸಿದರು. ಕಾವೇರಿ ನದಿ ಸ್ವಚ್ಚತಾ ಅಭಿಯಾನದ ಹಾಸನ ಜಿಲ್ಲಾ ಅಧ್ಯಕ್ಷರಾದ ಎಂ. ಎನ್. ಕುಮಾರಸ್ವಾಮಿ ಮಾತನಾಡಿ, ಕುಡಿಯಲು ಯೋಗ್ಯವಲ್ಲದ ಕಾವೇರಿ ನದಿಯ ನೀರನ್ನು ನಾವು ಕಾಣುವಂತಾಗಿದೆ. ನದಿಯನ್ನು ಗೌರವಿಸಿ ನದಿಯಲ್ಲಿನ ನೀರನ್ನು ಸ್ವಚ್ಛಂದವಾಗಿ ಕಾಪಾಡಿದರೆ ತಾಯಿಯನ್ನು ಗೌರವಿಸಿದಂತಾಗುತ್ತದೆ. ಅದ್ದರಿಂದ ಎಲ್ಲರೂ ನದಿಯ ಸಂರಕ್ಷಣೆಗೆ ಮುಂದಾಗಬೇಕಿದೆ.
ಹಾಗೆಯೇ ಇಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕೊಡುವ ಮೂಲಕ ನಾಳೆಯ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪೋಷಕರ ಮೇಲಿದೆ ಎಂದರು.
ಕೊಡಗು ಜಿಲ್ಲೆಯ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್. ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ, ಕಾರ್ಯದರ್ಶಿ ಬಿ. ನಟರಾಜು, ಶರಣ ಸಾಹಿತ್ಯ ಯುವ ಘಟಕದ ಜಿಲ್ಲಾಧ್ಯಕ್ಷ ಮೋಹನ್, ಬಸವೇಶ್ವರ ಸೌಹಾರ್ದ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಪಿ.ಉದಯಕುಮಾರ್, ತೊರೆನೂರು ಬಸವೇಶ್ವರ ದೇವಾಲಯದ ಅಧ್ಯಕ್ಷ ಟಿ.ಬಿ. ಜಗದೀಶ್, ಕೃಷಿಕರಾದ ಗುರುಲಿಂಗಪ್ಪ, ಹುಲುಸೆ ನಾಗಣ್ಣ,ಅಕ್ಕನ ಬಳಗದ ಗೌರವಾಧ್ಯಕ್ಷೆ ವಿಜಯಾ ಪಾಲಾಕ್ಷ, ಕಪನಪ್ಪ, ಚಿದಾನಂದ, ಪ್ರಕಾಶ್, ಸೋಮಶೇಖರಾಚಾರಿ, ಪ್ರೇಮಕುಮಾರ್ ದೇವಾಂಗ ಮೊದಲಾದವರಿದ್ದರು. ವಿನಂತ್ ವಚನ ಗಾಯನ ಮಾಡಿದರು.