ಸೋಮವಾರಪೇಟೆ, ಜು. ೨೧: ಹವಾಮಾನ ವೈಪ್ಯರಿತ್ಯ, ಅಕಾಲಿಕ ಮಳೆ, ಮುಂಗಾರು ವಿಳಂಬ ಇನ್ನಿತರ ಕಾರಣಗಳಿಂದ ಕಾಫಿ ಫಸಲು ಹಾನಿಯಾಗಿ ಬೆಳೆಗಾರರು ಸಾಲಗಾರರಾಗಿ ಸಂಕಷ್ಟದಲ್ಲಿದ್ದು, ಬೆಳೆಗಾರರ ಫಸಲು ಸಾಲ ಮತ್ತು ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಒತ್ತಾಯಿಸಿದೆ.

ಸೋಮವಾರಪೇಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎಂ. ಲವ, ಕಾಫಿ ಉದ್ದಿಮೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವಿವಿಧ ಮೂಲಗಳಿಂದ ೨೮ ಸಾವಿರ ಕೋಟಿ ರೂ. ಗಳ ಆದಾಯ ಹೋಗುತ್ತಿದೆ. ಆದರೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರಗಳು ಸ್ಪಂದಿಸದೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.

ಕೊಡಗಿನಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಫಸಲು ಶೇ.೬೦ ರಷ್ಟು ಹಾನಿಯಾಗಿದೆ. ಅತಿಯಾದ ಬಿಸಿಲಿನಿಂದ ಅರೇಬಿಕಾ ಕಾಫಿ ತೋಟಗಳಲ್ಲಿ ಬಿಳಿಕಾಂಡಕೊರಕ ಕೀಟಬಾಧೆಯಿಂದ ಫಸಲು ನೀಡುವ ಗಿಡಗಳು ಸಾಯುತ್ತಿವೆ. ಬಹುತೇಕ ಕಾಫಿ ತೋಟಗಳು ರೋಗಪೀಡಿತವಾಗಿವೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಬೆಳೆಗಾರರಿಗೆ ಕಾಫಿ ತೋಟ ನಿರ್ವಹಣೆ ಸಾಧ್ಯವಾಗದೆ ಪಾಳುಬಿಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಫಿ ತೋಟದ ನಿರ್ವಹಣೆಗಾಗಿ ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕ್‌ನಲ್ಲಿ ಸಾಲ ಮಾಡಲಾಗಿದೆ. ಬೆಳೆಗಾರರಿಗೆ ಬಡ್ಡಿ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಇವೆಲ್ಲಾ ಕಾರಣಗಳಿಂದ ಸಾಲ ಮನ್ನಾ ಮಾಡಬೇಕು ಎಂದು ಹೇಳಿದರು.

ಸರ್ಕಾರ ಬೆಳೆಗಾರರಿಗೆ ಸೌಲಭ್ಯ ಒದಗಿಸದಿದ್ದರೆ, ಕಾಫಿ ಉತ್ಪಾದನೆ ಗಣನೀಯವಾಗಿ ಕುಸಿತಗೊಂಡು, ಸರ್ಕಾರಗಳಿಗೆ ಆದಾಯಕ್ಕೂ ಹೊಡೆತಬೀಳಲಿದೆ. ಸಂಸದರು ಹಾಗೂ ಮಲೆನಾಡು ಭಾಗದ ಶಾಸಕರುಗಳು ಕಾಫಿ ಉದ್ದಿಮೆಯ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಸಾಲ ಮನ್ನಾ ಮಾಡುವುದಕ್ಕೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

ಕಾಫಿ ಬ್ಲಾಸಂ ಸಂದರ್ಭ ನಿಗದಿತ ಪ್ರಮಾಣದಲ್ಲಿ ಹೂಮಳೆ ಬೀಳಲಿಲ್ಲ. ಜೂನ್ ತಿಂಗಳಲ್ಲಿ ವಿಪರೀತ ಬಿಸಿಲು ಕಾಣಿಸಿಕೊಂಡಿತು. ಮುಂಗಾರು ವಿಳಂಬವಾಯಿತು. ಈಗ ಗಿಡಗಳು ರೋಗಪೀಡಿತವಾಗಿವೆ. ಕೀಟನಾಶಕ, ಶಿಲೀಂದ್ರನಾಶಕ, ರಾಸಾಯನಿಕ ಗೊಬ್ಬರಗಳ ಬೆಲೆ ಗಗನಕ್ಕೇರಿದೆ. ನಿಗದಿತ ಸಮಯದಲ್ಲಿ ಗೊಬ್ಬರ ಸಿಗುತ್ತಿಲ್ಲ. ಕಳೆದ ವರ್ಷ ಅಕಾಲಿಕ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಳುಮೆಣಸು ಬಳ್ಳಿಗಳು ನಾಶವಾಗಿವೆ. ಕೂಲಿ ಕಾರ್ಮಿಕರ ಸಂಬಳ ಹೆಚ್ಚಾಗಿದೆ. ಸರ್ಕಾರಗಳು ತುರ್ತಾಗಿ ಬೆಳೆಗಾರರಿಗೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಕೆ. ಪ್ರಸಿ, ಕಾರ್ಯದರ್ಶಿ ಮನೋಹರ್, ನಿರ್ದೇಶಕರುಗಳಾದ ಅನಂತರಾಮ್, ಕೆ.ಜಿ.ಎಫ್. ನಿರ್ದೇಶಕ ಸಿ.ಕೆ. ಮಲ್ಲಪ್ಪ ಇದ್ದರು.