ಕುಶಾಲನಗರ, ಜು. ೨೪: ವೃತ್ತಿಯೊಂದಿಗೆ ಪ್ರತಿಯೊಬ್ಬರೂ ಕಲೆಗಳ ಬಗ್ಗೆ ಆಸಕ್ತಿ ಹೊಂದುವAತಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಲ ಮಠಪತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೊಡಗು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಕುಶಾಲನಗರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಆವರಣದಲ್ಲಿ ನಡೆದ ವಿಶೇಷ ಘಟಕ ಯೋಜನೆ ಅಡಿ ಕಂಸಾಳೆ ನೃತ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಲೆಗೆ ಗೌರವ ನೀಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರಕೃತಿಯ ಆರಾಧನೆ, ಹಬ್ಬ ಹರಿದಿನಗಳಲ್ಲಿ ಮನರಂಜನೆಗಾಗಿ ಜಾನಪದ ಹಾಡುಗಳನ್ನು ಹಾಡುವ ಮೂಲಕ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಆಗಬೇಕಾಗಿದೆ ಎಂದರು.
ವಸತಿ ನಿಲಯದ ವಿದ್ಯಾರ್ಥಿ ಗಳಿಗೆ ಆರು ತಿಂಗಳ ಕಾಲ ಕಂಸಾಳೆ ನೃತ್ಯ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಮಾಹಿತಿ ನೀಡಿದ ಅವರು ವಾರದಲ್ಲಿ ಮೂರು ದಿನಗಳು ತರಬೇತಿ ನಡೆಯಲಿದೆ. ವಿದ್ಯಾರ್ಥಿಗಳು ಈ ಕಾರ್ಯಾಗಾರ ಸದುಪಯೋಗ ಪಡೆದು ಕೊಳ್ಳಬೇಕೆಂದು ಕೋರಿದರು. ಮೆಟ್ರಿಕ್ ನಂತರದ ಬಾಲಕರ ವಾರ್ಡನ್ ಮಧು ಎಂ.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಲೋಕೇಶ್ ಸಾಗರ್, ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಎನ್ ಚಂದ್ರಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್, ವಿದ್ವಾನ್ ಶಂಕರಯ್ಯ, ಕಲಾ ಮೇಳದ ಎನ್.ಕೆ ಮೋಹನ್ ಕುಮಾರ್, ಕಲಾ ಶಿಕ್ಷಕರಾದ ಎಂಎಸ್ ಶಂಕರ್, ಕಲಾವಿದ ಗೋವಿಂದ ನಾಯಕ, ನಿವೃತ್ತ ಅಧಿಕಾರಿ ಮಣಜೂರು ಮಂಜುನಾಥ್ ಮತ್ತಿತರರು ಇದ್ದರು. ವಸತಿ ನಿಲಯದ ವಿದ್ಯಾರ್ಥಿ ಅಭಿಲಾಶ್ ಕಾರ್ಯಕ್ರಮ ನಿರೂಪಿಸಿದರು.