ನಾಪೋಕ್ಲು, ಅ. ೩೦: ನಾಡು ಸುಖ-ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯಿಂದ ಇರಬೇಕಾದರೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಪರಸ್ಪರ ಸೌಹಾರ್ದತೆಯಿಂದ ಕೆಲಸ ಮಾಡಬೇಕು. ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಭಾಗಮಂಡಲದ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಅರೆಭಾಷಿಕ ಗೌಡ ಜನಾಂಗದ ಶಾಸಕರ ಅಭಿಮಾನಿಗಳ ವತಿಯಿಂದ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಯಿ ಕಾವೇರಿಯ ಆಶೀರ್ವಾದ ಎಲ್ಲರ ಮೇಲಿರಬೇಕೆಂದರೆ ಎಲ್ಲರೂ ತಾಯಿಯ ಇಚ್ಛೆಯಂತೆ ನಾಡಿನ ಒಳಿತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. .
ಪವಿತ್ರ ಕಾವೇರಿ ತುಲಾ ಸಂಕ್ರಮಣ ಸಂದರ್ಭ ಶಾಸಕರು ಅತ್ಯಂತ ಅಚ್ಚುಕಟ್ಟಾಗಿ, ಸೌಹಾರ್ದಯುತವಾಗಿ ಎಲ್ಲಾ ಜನಾಂಗದವರು ತಾಯಿ ಕಾವೇರಿ ತೀರ್ಥ ಸ್ವರೂಪಿಣಿಯಾಗಿ ಉಗಮಿಸುವುದನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಅರಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಸೂರಜ್ ಹೊಸೂರು, ಅರಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಕುದುಪಜೆ ಪ್ರಕಾಶ್, ಕೊಡಗು ಗೌಡ ವಿದ್ಯಾ ಸಂಘದ ನಿರ್ದೇಶಕ ದೇವಂಗೋಡಿ ಹರ್ಷ, ಚೇರಂಬಾಣೆ ಗೌಡ ಸಮಾಜದ ನಿರ್ದೇಶಕ ಕೊಡಗನ ತೀರ್ಥ ಪ್ರಸಾದ್, ತಾವೂರು ಭಗವತಿ ದೇವಾಲಯದ ಅಧ್ಯಕ್ಷ ಕೋಳಿಬೈಲು ವೆಂಕಟೇಶ್, ದೇವಂಗೋಡಿ ತಿಲಕ ಸುಬ್ರಾಯ ಸೇರಿದಂತೆ ಇನ್ನಿತರರು ಹಾಜರಿದ್ದರು.